Sunday, May 04, 2008

ನಮ್ಮ ಮೆಚ್ಚಿನ ಬ್ಲಾಗುಗಳಲ್ಲಿ ಹೊಸ ಪೋಸ್ಟುಗಳಿವೆಯಾ? : ಗೂಗಲ್ ರೀಡರ್ ಬಗ್ಗೆ ಪುಟ್ಟ ಪರಿಚಯ

ಶ್ರೀನಿಧಿಯ ಬ್ಲಾಗ್ ಅಪ್‌ಡೇಟ್ ಮೈಲ್‌ಗಳನ್ನ ನೋಡಿದಾಗ್ಲೆಲ್ಲ ಅಂದುಕೋತಿದ್ದೆ, ಈ ಬಗ್ಗೆ ಬರೀಬೇಕು ಅಂತ. ಇವತ್ತು 'ಮನಸು ಮಾತಾಡ್ತಿದೆ’ಯ ಶ್ರೀ ಕೂಡ ಇನ್ಮೇಲೆ ಬ್ಲಾಗ್ ಅಪ್ಡೇಟ್ ಮೈಲ್ ಕಳಿಸ್ತೀನಿ ಅಂತ ಮೈಲ್ ಮಾಡಿದಾಗ ಇವತ್ತು ಬರೆದೇ ಬಿಡ್ತೀನಿ ಅಂತ ಕೂತೆ. ಯಾವ್ದರ್ ಬಗ್ಗೆ ಅಂತಿದೀರಾ? ನಮ್ಮ ನೆಚ್ಚಿನ ಬ್ಲಾಗುಗಳು, ವೆಬ್‌ಸೈಟುಗಳಲ್ಲಿ ಹೊಸ ಪೋಸ್ಟ್‌ಗಳು ಬಂದ್ರೆ ಪತ್ತೆ ಇಡೋ ಸುಲಭವಾದ ವಿಧಾನ - ಗೂಗಲ್ ರೀಡರ್ ಬಗ್ಗೆ. ಹಲವು ಬ್ಲಾಗಿಗರು ಇದನ್ನ ಆಗ್ಲೇ ಉಪಯೋಗಿಸ್ತಿದಾರೆ, ಆದ್ರೆ ಇನ್ನೂ ಹಲವರಿಗೆ ಇದರ ಬಗ್ಗೆ ತಿಳಿದಿಲ್ಲ ಅನ್ನಿಸಿದ್ದರಿಂದ ಈ ಪೋಸ್ಟ್. ತುಂಬಾ ಟೆಕ್ನಿಕಲ್ ಆಗಿ ಹೇಳೋದಕ್ಕೆ ನಂಗೆ ಅಷ್ಟು ವಿಷ್ಯ ಗೊತ್ತೂ ಇಲ್ಲ, ಎಲ್ಲರಿಗೂ ಅವಶ್ಯಕವೂ ಅಲ್ಲ ಅನ್ನಿಸತ್ತೆ. ಉಪಯೋಗದ ದೃಷ್ಟಿಯಿಂದ ಎಷ್ಟು ಬೇಕೋ ಅಷ್ಟು ಹೇಳ್ತೀನಿ, ಮಿಕ್ಕಿದ್ದಕ್ಕೆ ಇದ್ದೇ ಇದೆಯಲ್ಲ, ಗೂಗಲೋಪನಿಷದ್!(ಸುಪ್ತದೀಪ್ತಿಯವರ ಪದ!)

ಜಿಮೈಲ್ ಅಕೌಂಟ್ ಇದ್ದವರೆಲ್ಲಾ ಲಾಗ್ ಇನ್ ಆದಾಗ ಕಂಪ್ಯೂಟರ್ ಪರದೆಯಲ್ಲಿ ನಿಮ್ಮ ಎಡ ಮೇಲ್ತುದಿಯಲ್ಲಿ ಆರ್ಕುಟ್ ಇತ್ಯಾದಿ ಗೂಗಲ್‌ನ ಇತರ ಸೌಲಭ್ಯಗಳಿಗೆ ಜಿಮೈಲ್ ಅಕೌಂಟಿನಿಂದಲೇ ನೇರವಾಗಿ ಹೋಗುವ ಬಗ್ಗೆ ನೋಡಿರಬಹುದು. ಈ ಸಾಲಿನಲ್ಲೇ ರೀಡರ್ ಅಂತಲೂ ಒಂದು ಟ್ಯಾಬ್ ಇರುತ್ತೆ. ಅಲ್ಲಿ ಹೋಗಿ ನಿಮ್ಮ ರೀಡರ್ ಅಕೌಂಟ್ ಪ್ರಾರಂಭಿಸಬಹುದು. ರೀಡರ್ ಒಳಹೊಕ್ಕಮೇಳೆ ’ಆ‍ಯ್‌ಡ್ ಸಬ್ಸ್ಕ್ರಿಪ್ಶನ್’ ಅನ್ನುವ ಕಡೆ ನಿಮ್ಮ ನೆಚ್ಚಿನ ಬ್ಲಾಗ್/ ವೆಬ್ಸೈಟುಗಳ ಯು ಆರ್ ಎಲ್ ಒಂದೊಂದಾಗಿ ಸೇರಿಸುತ್ತಾ ಹೋಗಬಹುದು. ಹೀಗೆ ಸೇರಿಸಿದಮೇಲೆ ಆ ಸೈಟ್ ಅಥವಾ ಬ್ಲಾಗಿನಲ್ಲಿ ಹೊಸತೇನಾದರೂ ಪ್ರಕಟವಾದಾಗ ನಿಮ್ಮ ರೀಡರ್ ಅಕೌಂಟಿನ ಇನ್‌ಬಾಕ್ಸಿಗೆ ಆ ಬಗ್ಗೆ ಸೂಚನೆ ಬರುತ್ತೆ. ಹೊಸ ಪೋಸ್ಟುಗಳನ್ನ ಹುಡುಕಿ ಅಲೆಯೋದು, ಅಥ್ವಾ ನೋಡದೇ ಮಿಸ್ ಮಾಡೋದು ಇದ್ರಿಂದ ತಪ್ಪುತ್ತೆ. (ನನ್ನಂಥಾ ಸೋಂಬೇರಿ ಬ್ಲಾಗಿಗರ ತಿಂಗಳೆರಡು ತಿಂಗಳಿಗೆ ಬರೋ ಪೋಸ್ಟ್‌ಗಳ ನಿರೀಕ್ಷೆಯಲ್ಲಿ ನಮ್ಮ ಬ್ಲಾಗುಗಳಿಗೆ ವ್ಯರ್ಥ ತೀರ್ಥಯಾತ್ರೆ ಮಾಡೀ ಮಾಡೀ ಸೋತುಹೋಗೋದು ತಪ್ಪುತ್ತೆ!:P)

ಇದಕ್ಕೆ ಬ್ಲಾಗ್ ಅಥವಾ ಸೈಟಿನ ಮಾಲೀಕರು feed enable ಮಾಡಿರುವುದು ಅಗತ್ಯ. (ಬ್ಲಾಗರ್‌ನಲ್ಲಾದರೆ ಸೆಟಿಂಗ್ಸ್‌ನಲ್ಲಿ ಸೈಟ್‌ಫೀಡ್ ಅಂತಿರೋಕಡೆ ಕ್ಲಿಕ್ಕಿಸಿ ಇದನ್ನು enable ಮಾಡಬಹುದು.) ಸಾಮಾನ್ಯವಾಗಿ ಬ್ಲಾಗರ್, ವರ್ಡ್‌ಪ್ರೆಸ್‌‌ಗಳಲ್ಲಿರೋ ಬ್ಲಾಗುಗಳಲ್ಲಿ ಮುಂಚೆಯಿಂದಲೇ feed enable ಆಗಿರುತ್ತೆ ಅನ್ಸುತ್ತೆ. (ವರ್ಡ್‌ಪ್ರೆಸ್ ಬಗ್ಗೆ ಅಷ್ಟಾಗಿ ಗೊತ್ತಿಲ್ಲ, ಆದ್ರೆ ಇಲ್ಲಿಯವರೆಗೆ ಯಾವ ವರ್ಡ್‌ಪ್ರೆಸ್ ಬ್ಲಾಗಿಗೆ ಸಬ್ಸ್ಕೈಬಿಸುವಾಗಲೂ ತೊಂದರೆಯಾಗಿಲ್ಲವಾದ್ದರಿಂದ ಹೀಗಿರಬಹುದು ಅಂತ ಹೇಳ್ತಿದ್ದೀನಷ್ಟೆ.) ಮುಕ್ಕಾಲು ಪಾಲು ವಬ್‌ಸೈಟುಗಳೂ ತಮ್ಮ ಹೊಸ ಪೋಸ್ಟುಗಳಿಗೆ ಹೀಗೆ feed enable ಮಾಡಿರುತ್ವೆ. ನಮ್ಮ ಕನ್ನಡದ ದಟ್ಸ್‌ಕನ್ನಡ, ಸಂಪದ - ಇವೆಲ್ಲ ಆ ಸಾಲಿಗೆ ಸೇರುವಂತಹವು. ಕೆಂಡಸಂಪಿಗೆಗೆ ಹೊಸ ಅವತಾರದಲ್ಲಿ feed enable ಮಾಡಿಲ್ಲ. ಪ್ರತೀಸಲ ಅಪ್‍ಡೇಟ್ ಆಗಿದೆಯೋ ಇಲ್ವೋ ನಾವೇ ಆ ಸೈಟಿಗೆ ಹೋಗಿ ಹುಡುಕಿ ನೋಡಿಕೊಳ್ಳಬೇಕು.

ರೀಡರ್ ಉಪ್ಯೋಗಿಸೋಕೆ ಷುರು ಮಾಡಿದ ಮೇಲೆ ನಮಗಿಷ್ಟವಾದ ಪೋಸ್ಟುಗಳನ್ನ ಸ್ನೇಹಿತರೊಂದಿಗೆ ಹಂಚಿಕೊಳ್ಳೋದೂ ಸುಲಭ. ಇದಕ್ಕೆ ಮೂರು ದಾರಿಗಳಿವೆ- ಒಂದು, ಯಾವುದೇ ಪೋಸ್ಟ್ ಓದಿದ ಕೂಡ್ಲೆ ರೀಡರ್‌ನಿಂದಲೇ ನಿಮ್ಮ ಗೆಳೆಯರಿಗೆ ಅದನ್ನು ಮೈಲ್ ಮಾಡಬಹುದು. ಎರಡು - ರೀಡರ್‌ನಲ್ಲಿ ಬರೋ ಹೊಸ ಪೋಸ್ಟ್‍ಗಳಲ್ಲಿ ನಿಮ್ಮ ಮೆಚ್ಚಿನವುಗಳನ್ನ ’ಶೇರ್’ ಮಾಡುವ ಆಯ್ಕೆ ಕ್ಲಿಕ್ಕಿಸಿದ್ರೆ ರೀಡರ್ ಅಕೌಂಟಿನಿಂದ ನಿಮ್ಗೆ ಸಿಗೋ ಪಬ್ಲಿಕ್ ಪೇಜಿನಲ್ಲಿ ಈ ಪೋಸ್ಟುಗಳು ಕಾಣಿಸಿಕೊಳ್ಳುತ್ವೆ. ಇದೊಂಥರಾ public list of your favourite reads ಅನ್ನಬಹುದು. ಇದಕ್ಕೇ ಪ್ರತ್ಯೇಕವಾದ ಯೂಆರೆಲ್ ಇದ್ದು, ನಿಮ್ಮ ಸ್ನೇಹಿತರು ಇಲ್ಲಿ ಬಂದು ನಿಮ್ಮ ಇತ್ತೀಚಿನ ಮೆಚ್ಚಿನ ಬರಹಗಳನ್ನು ಓದಬಹುದು. ನನ್ನ ರೀಡರ್ ಪೇಜ್ ಇಲ್ಲಿದೆ: http://www.google.com/reader/shared/user/16208109501848855281/state/com.google/broadcast

ಹಾಂ ಈ ಪುಟದಲ್ಲೇ get started with google reader ಅನ್ನೋ ಲಿಂಕನ್ನು ಕ್ಲಿಕ್ಕಿಸಿ ನಿಮ್ಮ ರೀಡರ್ ಯಾತ್ರೆ ಪ್ರಾರಂಭಿಸಬಹುದು:)
ಮೂರನೇದಾಗಿ, ಈ ಪಟ್ಟಿಯನ್ನು ನಿಮ್ಮ ಬ್ಲಾಗಿನಲ್ಲೂ ಹಾಕಿಕೊಳ್ಳಬಹುದು. ಹಲವು ಬ್ಲಾಗಿಗರು ಈ ಥರದ ಪಟ್ಟಿಗಳನ್ನ ತಮ್ಮ ಬ್ಲಾಗ್‌ಗಳಲ್ಲಿ ಹಾಕಿಕೊಂಡಿದ್ದಾರೆ. ನನ್ನ ಈ ಬ್ಲಾಗಿನಲ್ಲಿ ’Sree's shared items' ಅನ್ನುವ ಹೆಸರಲ್ಲಿ ಈ ಪಟ್ಟಿ ಇದೆ.

ಸರಿ, ಜಾಸ್ತಿ ತಲೆತಿನ್ನೋಕೆ ಹೋಗಲ್ಲ, ಉಪಯೋಗಿಸ್ತಾ ಹೋದಹಾಗೆ ಅದರ ವ್ಯಾಪ್ತಿ ನಿಮ್ಗೇ ಗೊತ್ತಾಗುತ್ತೆ. happy reading!:)

Monday, April 21, 2008

ನದಿ-ದಡ

ನದಿ ದಡ ದಡ ನದಿ

ನದಿ ನದಿ ನದಿ ದಡ

ದಡ ದಡ ನದಿ ದಡ

ಹಾರುತ್ತ ನಿಲ್ಲುತ್ತ

ನಿಲ್ಲುತ್ತ ಹಾರುತ್ತ

ಹರಿಯೋದು ನದಿಯೋ ದಡವೋ?

ನಿಲ್ಲೋ ನೆಲೆ ದಡವೋ ನದಿಯೋ?

ಉತ್ತರ ಮರೆತ ಪ್ರಶ್ನೆಗಳಲ್ಲಿ

ಗೆಲುವು ಕಳೆದಿದೆ

Sunday, March 16, 2008

ಕನ್ನಡ ಜಾಲಿಗರ ಮೀಟ್‌ - ಒಂದಷ್ಟು ಮೆಲುಕು

ಬ್ಲಾಗರ್ಸ್ ಮೀಟ್ ಬಗ್ಗೆ ಇ-ಮೈಲ್ ಗಳು, ಪೋಸ್ಟ್‌ಗಳು ಹಾರಾಡಿ ಇಲ್ಲೀವರೆಗೆ ಯುಆರೆಲ್ ಅಷ್ಟೆ ಆಗಿದ್ದವ್ರೆಲ್ಲರನ್ನ ಒಂದುಕಡೆ ಭೇಟಿಯಾಗೋ ಸಂಭ್ರಮ, excitementಗಳು ತುಳುಕಾಡಿ ಅಂತೂ ಇವತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌‍ನಲ್ಲಿ ಎಲ್ಲ ಸೇರುವಂತಾಯ್ತು. ನಾಲ್ಕಕ್ಕೆ ಕಾರ್ಯಕ್ರಮ ಅಂತ ಕಾಲು ಘಂಟೆ ಮುಂಚೆನೇ ಹೋಗಿ ಸೇರಿದವಳಿಗೆ ಇವರ್ ಬಿಟ್ಟ್ ಅವರ್ ಬಿಟ್ಟ್ ಇವರ್ ಬಿಟ್ಟು ಅವರ್ ಬಿಟ್ಟ್ ಇವರ್ಯಾರು ಅಂತ ತೆರೆದ ಕಣ್ಣಲ್ಲೇ ಗೆಸ್ಸಿಂಗ್ ಗೇಮ್‌ ಷುರು ಆಗಿತ್ತು. ಕಡೇ ಪಕ್ಷ ಈ ಮೀಟಿಗೆ ಆಹ್ವಾನ ಕಳಿಸಿದ್ದವರನ್ನಾದ್ರೂ ಸರಿಯಾಗಿ ಗುರುತಿಸಬೇಕು ಅಂತ ಆರ್ಕುಟ್ ಆಲ್ಬಂಗಳಿಗೆ ಭೇಟಿ ಕೊಟ್ಟಿದ್ರೂ ಕೊನೆಗೆ ಸಹಾಯಕ್ಕೆ ಬಂದದ್ದು ಯುಆರ್‌ಎಲ್‌ಗಳೇ!:)) ಯಾರಿರಬಹುದು ಅಂತ ಗೆಸ್ ಮಾಡ್ತಾ, ಪರಿಚಯ ಮಾಡಿಕೊಳ್ತಾ, ಮಾಡಿಸ್ತಾ...ನಾಕೂವರೆ ಸುಮಾರಿಗೆ ಕಾರ್ಯಕ್ರಮ ಷುರುವಾಯ್ತು. ಕಾರ್ಯಕ್ರಮದ ವರದಿ ಇಲ್ಲಿ ಮಾಡೋ ಸಾಹಸಕ್ಕೆ ಹೋಗಲ್ಲ, ಅದು ನಿಮಗೆ ಬೇರೆ ಕಡೆಯೂ ಸಿಗುತ್ತೆ ಅನ್ನೋ ನಂಬಿಕೆಯೂ ಇರೋದ್ರಿಂದ!:) ಕಾರ್ಯಕ್ರಮಕ್ಕೆ ನನ್ನ ಪ್ರತಿಕ್ರಿಯೆಗಳು, ನನ್ನಲ್ಲಿ ಎದ್ದ ಕೆಲವು ಪ್ರಶ್ನೆಗಳು, ಒಂದಿಷ್ಟು ಖುಷಿ - ಇವುಗಳು ಈಗ ಇಲ್ಲಿ ನಿಮಗಾಗಿ.

ಮೊದಲನೇದಾಗಿ ಅಷ್ಟು ಜನ ಕನ್ನಡ ಬ್ಲಾಗರ್ಸ್ ಒಟ್ಟು ಸೇರಿದ್ದೇ ತುಂಬಾ ಖುಷಿ ಕೊಟ್ಟ ವಿಷ್ಯ. ಅದಕ್ಕೆ ಪ್ರಣತಿಗೆ ಮೊದಲ ಥ್ಯಾಂಕ್ಸ್! ಅಂತರ್ಜಾಲದಲ್ಲಿ ಕನ್ನಡ ಬೆಳೆಸೋ ಪ್ರಯತ್ನ ಮಾಡ್ತಿರೋ ಅನುಭವಿಗಳನ್ನ ಕರೆಸಿ ಮಾತಾಡ್ಸಿದ್ದು apt ಅನ್ನಿಸ್ತು. ಕಾರ್ಯಕ್ರಮದ ಮೊದಲಿನ ಭಾಗದಲ್ಲಿ ಸುಮಾರು ಪಾಲು ತಾಂತ್ರಿಕ ಸಮಸ್ಯೆ-ಸವಾಲುಗಳ ಚರ್ಚೆಗೇ ಹೊರಟುಹೋಯಿತು, ಅವೆಲ್ಲಾ ನನಗಂತೂ ಓವರ್‌ಹೆಡ್ ಟ್ರಾನ್ಸ್‌ಮಿಶನ್ ಆಯ್ತು ಅನ್ನೋದು ಬೇರೆ ಹೇಳಬೇಕಿಲ್ಲ! ಸಂಪದದ ಹರಿಪ್ರಸಾದ್ ನಾಡಿಗರು ಹೇಳಿದ್ದು ಇದ್ದಿದ್ರಲ್ಲಿ ಸ್ವಲ್ಪ ಅರ್ಥವಾಯ್ತು. ಸರಳವಾಗಿ, ನೇರವಾಗಿ ಹೇಳಿದ್ರು. ಇನ್ನೊಂದ್ ಸ್ವಲ್ಪ ನಿಧಾನಕ್ಕೆ ಮಾತಾಡಬಹುದಿತ್ತು ಅನ್ನಿಸ್ತು. ಬರೀ ಭಾವಲಹರಿಗಳಲ್ಲದೇ ಬೇರೆ ಬೇರೆ ವಿಷಯಗಳ ಬಗ್ಗೆನೂ ಕನ್ನಡದಲ್ಲಿ ಬ್ಲಾಗಿಸೋ ಅವಶ್ಯಕತೆ, ಸಾಧ್ಯತೆಗಳ ಬಗ್ಗೆ ಕೆಂಡಸಂಪಿಗೆಯ ರಷೀದರು, ದಟ್ಸ್‌ಕನ್ನಡದ ಶ್ಯಾಮಸುಂದರ್‍ಅವರು ಹೇಳಿದ್ರು. ಈಚೆಗೆ ಹುಲುಸಾಗಿ ಬೆಳೀತಿರೋ ಬ್ಲಾಗ್‌ಗಳನ್ನ ಓದ್ತಾ ಈ ಮಾತು ನನ್ನ ಮನಸ್ಸಿಗೂ ಬಂದಿತ್ತು. ಅದಕ್ಕೇ ಹೀಗೇಸುಮ್ಮ್ನೆಇಲ್ಲಿ ಬರೆಯೋದರ ಜೊತೆಗೆ ಸಂಗೀತಕ್ಕಾಗಿ sree-raaga.blogspot.com ಷುರು ಮಾಡಿದ್ದೆ. ಆದ್ರೆ ಹಾಗಂತ ಭಾವಲಹರಿಗಳಿಗೆ ಬೆಲೆಯಿಲ್ಲ ಅಂತಲ್ಲ. ಕಂಪ್ಯೂಟರ್ ಜನಾಂಗಕ್ಕೆ ಕನ್ನಡ ಹತ್ತಿರವಾಗಿಸೋದ್ರಲ್ಲಿ, ನಾವೂ ಕನ್ನಡ ಓದ್ತೀವಿ-ಬರೀತೀವಿ ಅನ್ನೋ ಅಭಿಮಾನ ಹುಟ್ಟಿಸೋದ್ರಲ್ಲಿ ಭಾವಲಹರಿಗಳ ಪಾತ್ರ ಅದನ್ನ ದಾಟಬೇಕಾದ ಅವಶ್ಯಕತೆಯಷ್ಟೇ ದೊಡ್ದದು ಅನ್ನಿಸುತ್ತೆ.

ಇದೇ ವಿಷ್ಯಕ್ಕೆ ಸಂಬಂಧ ಪಟ್ಟಹಾಗೆ ಶ್ಯಾಮ್‌ಸುಂದರ್ ಅವ್ರು ಹೇಳಿದ್ದ್ ಇನ್ನೊಂದು ಮಾತು - ಬ್ಲಾಗರ್ಸ್ ಜವಾಬ್ದಾರಿಯ ಬಗ್ಗೆ. ನನಗೇನ್ ಬೇಕೋ ಬರೀತೀನಿ, ನಿಂಗೆ ಇಷ್ಟ ಇದ್ದ್ರೆ ಓದು, ಕಷ್ಟವಾದ್ರೆ ಬಿಡು ಅನ್ನೋ ಧೋರಣೆ ತಪ್ಪು ಅಂದ್ರು. ಅದು ಸರೀನೇ... ಆದ್ರೆ ಬ್ಲಾಗ್ ಷುರುಮಾಡಿದ್ ಹೊಸದ್ರಲ್ಲಿ ನನಗೂ ಆ ಧೋರಣೆ ಇದ್ದದ್ದು ಸುಳ್ಳಲ್ಲ. ಆ ಬಗ್ಗೆ ತಿಳಿಯದೇ ಕನ್ನಡಸಾಹಿತ್ಯ.ಕಾಂನ ಶೇಖರ್‌ಪೂರ್ಣ‌ಅವರ ಜೊತೆ ವಾದಕ್ಕೂ ಇಳಿದಿದ್ದೆ! ಈಗ ಭಾರೀ ಜವಾಬ್ದಾರಿಯುತವಾಗಿ ಬರೀತೀನಿ ಅಂತಲ್ಲ. ಆದ್ರೆ ಕಡೇಪಕ್ಷ ಹಾಗೆ ಬರೀತಿಲ್ಲ ಅನ್ನೋ ಅರಿವು, ಅದರ ಬಗ್ಗೆ ಸ್ವಲ್ಪ guilt, ಚೆನ್ನಾಗಿ, ಅರ್ಥಪೂರ್ಣವಾಗಿ ಏನಾದ್ರೂ ಬರೀಬೇಕನ್ನೋ ಹಂಬಲ ಇದೆ ಅನ್ನಬಹುದು. ಇಷ್ಟು ಅನ್ನಿಸೋಕೆ ತಲೆಯಮೇಲೆ ಯಾವ ಬೋಧಿವೃಕ್ಷವೂ ಬೆಳೀಲಿಲ್ಲ, ೨ ವರ್ಷ ಹೀಗೇಸುಮ್ಮ್ನೆ ಕುಟ್ಟಿ ಉಳಿದ ಬ್ಲಾಗಿಗರ ಜೊತೆ interact ಮಾಡ್ತಾ, ಅವರು ಬರೆದದ್ದು ಓದ್ತಾ ಬಂದ ಅನುಭವ ಸಾಕಾಯ್ತು. ಒಂದಷ್ಟು introspection ಮಾಡಿಕೊಂಡ ಎಲ್ಲ ಬ್ಲಾಗಿಗರೂ ಹೀಗೆ ಅನುಭವದ ಘಟ್ಟಗಳನ್ನ ಹಾದುಹೋಗ್ತಾರೆ, ಹೀಗೇ ಬರೀತಾ ಹೋದ ಹಾಗೆ introspection ನಮ್ಮೊಳಗಿಂದ್ಲೇ ಅವಶ್ಯಕತೆಯಾಗಿ ಬರುತ್ತೆ ಅನ್ನಿಸುತ್ತೆ. ಯಾರಾದ್ರೂ ಸ್ವಲ್ಪದೊಡ್ಡವರು-ಅನುಭವಿಗಳು ನಮ್ಮ ಬರಹಗಳನ್ನ ಓದಿ, ನಮ್ಮ ಭಂಡಧೈರ್ಯಗಳಿಗೆ ನಾಕು ಪ್ರಶ್ನೆಗಳನ್ನಿಟ್ಟರೆ ಈ introspection ಇನ್ನಷ್ಟು ಸುಲಭವಾಗುತ್ತೆ. ಜೊತೆಗೆ ಸ್ವಲ್ಪ guidence ಕೂಡ ಸಿಕ್ಕರೆ ಗಟ್ಟಿಯೂ ಆಗ್ತೀವೆನೋ, ಒಳ್ಳೇ ಬರಹಗಾರರಲ್ಲದಿದ್ರೂ ಒಳ್ಳೆಯ ಓದುಗರಾಗಿಯಾದ್ರೂ...

ಅದೇನೇ ಇದ್ದರೂ ಯಾವ ಪಬ್ಲಿಶರ್ ಹಂಗಿಲ್ಲದೇ ನಾಕುಜನ ಓದುಗರನ್ನ ಗಿಟ್ಟಿಸಿಕೊಳ್ಳೋದರಿಂದ ನಮ್ಮಲ್ಲಿ ಒಂದುರೀತಿಯಲ್ಲಿ natural bratತನ ಇದ್ದೇ ಇರುತ್ತೆ, ಅದರಿಂದ ಬ್ಲಾಗ್ ಬರಹಗಳಿಗೇ ಒಂದು ವಿಶಿಷ್ಟ ಫ್ಲೇವರ್ ಕೂಡ ಇರುತ್ತೆ. ಅದು ತೀರಾ ಬೇಜವಾಬ್ದಾರಿತನವಾಗದೇ ಹೋಗೋದಕ್ಕೆ ಸ್ವಲ್ಪ ಎಚ್ಚರವಹಿಸಬೇಕಷ್ಟೆ. ಸಂವಾದ, ಬೇರೆ ಬರಹಗಳ ಓದು ಇದಕ್ಕೆ ಸಹಾಯವಾಗುತ್ತೆ ಅಂತ ನನಗನ್ನಿಸೋದು... ನಮ್ಮ-ನಮ್ಮ ನಡುವಿನ ಮಾತುಗಳು ಬೆಳೀಬೇಕು ಅನ್ನೋದಕ್ಕೆ, ಇವತ್ತಿನ ಮೀಟ್‌ನಂಥದ್ದರ ಅವಶ್ಯಕತೆಗೆ ಇನ್ನೊಂದು ಕಾರಣ...

ಬ್ಲಾಗಿಂಗ್ ಅನುಭವದ ಬಗ್ಗೆ ಮಾತಾಡಿದವ್ರಿಗೆ ಇನ್ನೊಂದೆರಡು ನಿಮಿಷ ಪ್ರಿಪರೇಷನ್ ಸಮಯ ಸಿಕ್ಕಿದ್ರೆ ಸ್ವಲ್ಪ ಫೋಕಸ್ಡ್ ಆಗಿ ಮಾತಾಡೋಕೆ ಸಾಧ್ಯವಾಗ್ತಿತ್ತೇನೋ ಅನ್ನಿಸ್ತು. ’ಚೆನ್ನಾಗಿದೆ’ ಅನ್ನೋದರಿಂದ ಮುಂದೆ ಹೋಗಿ ವಿಮರ್ಶೆಯೂ ಬರಬೇಕು ಅನ್ನೋ ಸುಧನ್ವ ದೇರಾಜೆಯವರ ಮಾತು ನಮ್ಮ ನಮ್ಮಲ್ಲಿ ಇನ್ನಷ್ಟು ಮಾತು-ಕತೆಯ ಅವಶ್ಯಕತೆಯನ್ನ ತೋರಿಸ್ತು ಅನ್ನಿಸುತ್ತೆ. ಈ ರೀತಿಯ ಹೀಗೇ ಸುಮ್ಮನೆ ಚೆನ್ನಾಗಿದೆ ಅನ್ನೋ ಕಾಮೆಂಟುಗಳಿಗೂ ಅವುಗಳದ್ದೇ ಬೆಲೆ ಇದೆ, ಬರೆಯುವವರ ಹುಮ್ಮಸ್ಸಿಗೆ ನೀರೆರೆಯೋದರಲ್ಲಿ. ಆದರೆ ಪ್ರಕಟಿತ ಸಾಹಿತ್ಯಕ್ಕೆ ಸಿಗುವಷ್ಟು ವಿಮರ್ಶೆಯ ಮರ್ಯಾದೆ ಸಿಗದಿರೋದಕ್ಕೆ ಇದು ಬಹುಮಟ್ಟಿಗೆ ’ಹೀಗೆ ಸುಮ್ಮನೆ’ ಬರಿಯೋ-ಓದೋ ಮೀಡಿಯಮ್ ಆಗಿರೋದು ಕಾರಣವೇನೋ. ರೀಡಿಂಗ್ ಕ್ಲಬ್ ಆಗಿಯೋ ಮೈಲ್ ಗ್ರೂಪ್ ಆಗಿಯೋ ಬರೆದದ್ದನ್ನು ಚರ್ಚಿಸಲು ಒಂದು ಮಾಧ್ಯಮ ಹುಡುಕಿಕೊಳ್ಳಬೇಕಾದ ಅಗತ್ಯ ಇದೆ ಅನ್ನಿಸುತ್ತೆ, ಕಾಮೆಂಟ್‌ಗಳ ಮೂಲಕವೇ ಇದು ಸಾಧ್ಯವಾಗೋದು ಅಷ್ಟು ಸುಲಭವಲ್ಲವೇನೋ ಅನ್ನಿಸುತ್ತೆ. ಯಾಕಂದ್ರೆ ಬ್ಲಾಗ್ ಓದೋದು, ಕಾಮೆಂಟಿಸೋದು ಎಲ್ಲಾ ಕ್ಯಾಶುವಲ್ಲಾಗಿ, ಯಾವಾಗ್ಲೋ ಸಿಕ್ಕ ಎರಡು ನಿಮಿಷದ ಬ್ರೇಕ್‌ನಲ್ಲೂ ನಡೆದುಹೋಗ್ತಿರುತ್ತೆ. ಫೋಕಸ್ಡ್ ಪ್ರತಿಕ್ರಿಯೆ-ಚರ್ಚೆಗಳಿಗೆ ಅದಕ್ಕೇ ಆದ ಒಂದು ಸ್ಥಾನ ಕಲ್ಪಿಸದೇ ಇದು ಸಾಧ್ಯವಾಗಲ್ಲ. ಕನ್ನಡ ಬ್ಲಾಗ್‌ಗಳ ಸಂಖ್ಯೆಯ ಜೊತೆ ವ್ಯಾಪ್ತಿಯೂ ಬೆಳೀತಿರೋ ಕಾಲದಲ್ಲಿ ಅವುಗಳನ್ನ ಪೋಷಿಸೋದಕ್ಕೆ ಈ ರೀತಿಯ ಸಪೋರ್ಟ್ ಸಿಸ್ಟಂ ಹುಟ್ಟೋ ಅವಶ್ಯಕತೆ ಇದೆ ಅನ್ನಿಸುತ್ತೆ. ಇವತ್ತಿನ ಮೀಟ್ ಈ ಬಗೆಯ ಸಂವಾದಗಳಿಗೆ ಒಂದು ಒಳ್ಳೆಯ ಪ್ರಾರಂಭ ಅನ್ನಿಸುತ್ತೆ.

ಚಹಾ ವಿರಾಮದಲ್ಲಿ ಜಯಾ ಹೇಳಿದಂತೆ ಸ್ವಲ್ಪ preachy ಅನ್ನಿಸಿದ್ರೂ ಚಿಂತನೆಗೆ ಹಚ್ಚೋ ಹಲವು ವಿಷ್ಯಗಳು ಕಾರ್ಯಕ್ರಮದಲ್ಲಿದ್ದ್ವು ಅನ್ನೋದು ನಿಜ. ಮೊದಲ ಪ್ರಯತ್ನವಾಗಿ ಕಾರ್ಯಕ್ರಮ ತುಂಬಾ ಯಶಸ್ವಿ ಅನ್ನಿಸ್ತು. ನಮ್ಮ ನಡುವೆ ಇನ್ನೊಂದಿಷ್ಟು interactionಗೆ ಅವಕಾಶ, ಕಂಟೆಂಟ್ ಬಗ್ಗೆ ಇನ್ನೊಂದಿಷ್ಟು ಗಮನ ಇದ್ದಿದ್ದರೆ... ಇರುತ್ತೆ, ಮುಂದಿನ ಪ್ರಯತ್ನದಲ್ಲಿ, ಅನ್ನಿಸುತ್ತೆ.

ಒಟ್ಟ್ನಲ್ಲಿ ಹಲವು ದಿನಗಳಿಂದ ಒಬ್ಬರದೊಬ್ಬರು ಬ್ಲಾಗ್ ಓದ್ತಾ, ಕಮೆಂಟಿಸ್ತಾ ಇದ್ದ ಹಲವು ಗೆಳೆಯರನ್ನ ಮೊದಲಬಾರಿ ಮುಖತಃ ಭೇಟಿ ಮಾಡಿದ್ದು ತುಂಬಾ ಖುಷಿಯಾಯ್ತು! ಶ್ರೀ, ಸುರೇಖಾ(ಮನಸ್ವಿನಿ), ಸಿಂಧು, ಶ್ರೀನಿಧಿ, ಸುಶ್ರುತ, ರಾಧಾಕೃಷ್ಣ, ಅರವಿಂದ್ ನಾವಡ, ಶಿವಕುಮಾರ್, ಗುರುರಾಜ್... ಅಲ್ಲದೇ ಓದಿ ಚೆನ್ನಾಗಿ ಬರೀತಾರೆ ಅನ್ನಿಸಿದ್ದ ಹಲವು ಬ್ಲಾಗಿಗರನ್ನ ನೋಡಿದ್ದು, ಮಾತಾಡಿಸಿದ್ದು, ಹೊಸ ಪರಿಚಯಗಳಾಗಿದ್ದು... I guess everyone shares the feeling of wanting to take this forward. ಪ್ರಣತಿಗೆ ಎಷ್ಟು ಥ್ಯಾಂಕ್ಸ್ ಹೇಳಿದ್ರೂ ಸಾಲ್ದು! ಮಾತಾಡೋಕೆ ಟೈಮ್ ಸಾಲಲಿಲ್ಲ, ಮುಂದಿನ ಭೇಟಿ ಬೇಗ ಆಗ್ಬೇಕು! ಈ ಸಲ ಬರದೇ ಮಿಸ್ಆದ್ ಬ್ಲಾಗಿಗರನ್ನೂ ಮುಂದಿನಸಲ ಮೀಟ್ ಮಾಡೋ ಹಾಗಾಗಬೇಕು!

ಅಂದಹಾಗೆ ಯಾವ ಮದುವೆಮನೆ ಹುಡುಗೀರ್‍‌ಗೂ ಹೆಚ್ಚಾಗಿ ಸಂಭ್ರಮ-ಸಡಗರಗಳಿಂದ ಓಡಾಡ್ತಿದ್ದ ನಮ್ಮ ಶ್ರೀನಿಧಿ-ಸುಶ್ರುತ ಹುಡುಗರ್ ಗುಂಪನ್ನ ನೋಡಿ ಭಾಳಾ ಖುಷಿಯಾಯ್ತು!

ತುಂಬಾ ಕೊರೆದುಬಿಟ್ಟೆ! ಏನ್ ಮಾಡೋದು, ಅಷ್ಟು ಜನ ಕುಟ್ಟಿಗರನ್ನ ಒಟ್ಟಿಗೇ ನೋಡಿದ್ದ್ ಎಫೆಕ್ಟು!:P ಸರಿ ಇನ್ನು ಮಿಕ್ಕ ವಿವರಗಳಿಗೆ ಬೇರೆ ಬ್ಲಾಗ್‌ಗಳನ್ನ ನೋಡಿ:) ಮತ್ತೆ ನನ್ನ ಕ್ಯಾಮರಾ ಚಾರ್ಜ್ ಮಾಡೊದ್ ಮರೆತಿದ್ರಿಂದ ಫೋಟೋಗಳಿಗೆ ಕಾಯಬೇಕು...ನೀವ್ ಯಾರಾದ್ರೂ ಕ್ಲಿಕ್ಕಿಸಿದ್ರೆ ಪ್ಲೀಸ್ ಕಳ್ಸಿ!:)

Thursday, February 28, 2008

ಮತ್ತೆ ಸುತ್ತುತ್ತಾ

ಭರವಸೆಗಳಿಗೆ ರಜಾ ಕೊಟ್ಟುಬಿಡಬೇಕು
ಕನಸುಗಳನ್ನ ಗುಡಿಸಿ ಬಿಸಾಕಿಬಿಡಬೇಕು
ತಣ್ಣಗಿದ್ದುಬಿಡಬೇಕು
ಬೇಕು ಬೇಕು ಬೇಕು ಬೇಕು
ಫೀನಿಕ್ಸುಗಳು ಮತ್ತೆ ಎದ್ದು ಕೂತವು
ಭಸ್ಮಾಸುರನ ಬೂದಿಯಿಂದೆದ್ದ ಮೋಹಿನಿಯರು
ಕಣ್ಣಲ್ಲಿ ನಾಕು
ಕನಸಲ್ಲಿ ಎಂಟು
ಒಂದು ಬೂದಿಗೆ ಎರಡು ಹಕ್ಕಿ ಫ್ರೀ -
ಕನಸೀಗ ರಕ್ತಬೀಜಾಸುರ.
ಯಾರಪ್ಪನ ಮನೇ ಗಂಟು,
ಕನಸಿಗೇನು ಕಾಸೇ?!
ಮತ್ತೆ ಸುತ್ತುತ್ತಾ
ಸರಿ, ಬನ್ನಿ, ಕುಕ್ಕಿ ಎಂದೆ
ಮತ್ತೆ ಸುಡುತ್ತಾ

Wednesday, February 20, 2008

ದೇಶಕಾಲದ ನಂಟು

ಕೆಲಸಕ್ಕೆ ಸೇರಿದ್ ಹೊಸದರಲ್ಲಿ ಊರಿಗೆಲ್ಲ ಒಬ್ಬಳೇ ಪದ್ಮಾವತಿಯಂತೆ ಅಲ್ಲಿದ್ದ ಆಲ್‍ಮೋಸ್ಟ್ ಏಕೈಕ(ಆಗ) ಕನ್ನಡ ಓದುಗಳಾಗಿ ಮೆರೀತಿದ್ದಾಗ, ಕನ್ನಡದ little magazineಗಳ ಬಗ್ಗೆ ಮಾಹಿತಿ ಹುಡುಕ್ತಿದ್ದಾಗಲೆಲ್ಲ ಪದೇ ಪದೇ ಎದುರಾದ ’ನೀನ್ ದೇಶಕಾಲ ಓದಲ್ಲ್ವಾ/ನೋಡಿಲ್ಲ್ವಾ’ ಪ್ರಶ್ನೆಗಳಿಂದ ಓಹ್ ಇದನ್ನ್ ಒಂದ್ಸಲ ನೋಡ್ಬೇಕು ಅನ್ನಿಸಿದ್ದ್ರೂ ಅದು ಅಲ್ಲಿಗೇ ನಿಂತಿತ್ತು.

ಈಚೆಗೆ ಬರಿಯೋದು ಕಮ್ಮಿ, ಓದೋದು ಜಾಸ್ತಿ ಮಾಡ್ಬೇಕು ಅನ್ನಿಸಿ, ಕುವೆಂಪು-ಕಾರಂತರಾಚೆ ಕನ್ನಡ ಓದಿದ್ದು ಸಾಲ‍ದು ಅಂತ ಜ್ಞಾನೋದಯ ಆಗಿ, ಅಲ್ಲಿ ಇಲ್ಲಿ ಪುಸ್ತಕ ಹುಡುಕ್ತಾ, ಕೈಗೆ ಸಿಕ್ಕಿದ್ದ್ ಓದುತ್ತಾ ಇಂಟರ್ನೆಟ್ ಅನ್ನೋ ಬಲೆಯಲ್ಲಿ ಕನ್ನಡ ಜಾಲಾಡ್ತಾ ಸಿಕ್ಕಪಕ್ಕ ಬ್ಲಾಗುಗಳು, ವೆಬ್‍ಸೈಟ್‍ಗಳನ್ನ ಹಿಗ್ಗಾಮುಗ್ಗಾ ಓದ್ತಾ ಕಾಳು-ಜೊಳ್ಳುಗಳ ಮಧ್ಯೆ ಮುಗ್ಗರಿಸ್ತಿದ್ದ ಹೊತ್ತಿಗೆ ’ದೇಶಕಾಲ’ಕ್ಕೆ ಮೂರು ತುಂಬಿದ ಸಂಭ್ರಮ ಎಲ್ಲಾ ಕಡೆ ಕೇಳಿಬಂದದ್ದು ಯಾವ ಸಚಿನ್‍ನೂ ಮೀರಿಸೋ ಟೈಮಿಂಗು ಅಂತ ನನ್ನ್ ಅಭಿಪ್ರಾಯ. ನೀನಾಸಂ ಶಿಬಿರಕ್ಕೆ ಹೋಗೋ ಅವಕಾಶವೂ ಈ ಸಲ ಬಂದು, ಅಲ್ಲಿ ಮತ್ತೆ ದೇಶಕಾಲದ ವಲಯದಲ್ಲಿ ಮುಳುಗೆದ್ದು ಬೆಂಗ್ಳೂರಿಗೆ ಬಂದಿಳಿದ್ರೆ ಮತ್ತೆ ನಮ್ಮ ಐ ಎಫ್ ಏ ನ್ಯೂಸ್‍ಲೆಟರು, ಸಂಪದ, ಎಲ್ಲಾ ಸೇರಿ ದೇಶಕಾಲ-ಜಪ ಮುಂದುವರೆಸಿಬಿಟ್ಟಿದ್ವು! ಇನ್ನು ಸಬ್‍ಸ್ಕ್ರೈಬಿಸದೇ ದಾರಿಯಿಲ್ಲ ಅಂತ ಚೆಕ್ ಬರೆದು, ನನ್ನ ಎಂದಿನ ಸೋಮಾರಿತನದ ದೆಸೆಯಿಂದ ಒಂದು ವಾರ ಬಿಟ್ಟು ಪೋಸ್ಟಿಸಿ ಇನ್ನೂ ಸುಧಾರಿಸ್ಕೋತಿದ್ದೆ. ಎರಡನೇ ದಿನಕ್ಕೇ ಕೊರಿಯರ್ ಬಂದುಬಿಡೋದಾ?! ನೀನಾಸಂನಲ್ಲಿ ವಿವೇಕ್ ಶಾನಭಾಗರನ್ನ ದೂರದಿಂದ ನೋಡಿ ಈ ಮನುಷ್ಯ ಎಷ್ಟು ತಣ್ಣಗಿರ್ತಾರಪ್ಪ ಅಂತ ಅಚ್ಚರಿಪಟ್ಟಿದ್ದೆ. ಅವರ ಸದ್ದುಗದ್ದಲವಿಲ್ಲದ ಎಫಿಶಿಯೆನ್ಸಿಯ ಬಗ್ಗೆ ಈಗಾಗ್ಲೇ ಕೇಳಿದ್ರೂ ಇದನ್ನ ಅರಗಿಸಿಕೊಳ್ಳೋಕೆ ಸ್ವಲ್ಪ ಸಮಯವೇ ಬೇಕಾಯ್ತು!

ಸಾಹಿತ್ಯದ ವಿದ್ಯಾರ್ಥಿಯಾಗಿದ್ದೂ ಕನ್ನಡಸಾಹಿತ್ಯವನ್ನ ಫಾರ್ಮಲ್ ಆಗಿ ಓದದ ಕಾರಣ ಮೊದಲಸಲ ಕನ್ನಡಸಾಹಿತ್ಯಕ್ಕೆ ಮೀಸಲಿಟ್ಟ ಜರ್ನಲ್ ಕೈಯ್ಯಲ್ಲಿ ಹಿಡಿದಾಗ ಹುಟ್ಟಿದ ಎಂತೋ ಏನೋ, ಕನ್ನಡವೇ ಪರಕೀಯವೆನಿಸಿ ಅತಂತ್ರದಲ್ಲಿ ಮುಳುಗಿಬಿಡ್ತೀನೇನೋ ಅನ್ನೋ ಅನುಮಾನಗಳನ್ನೂ, ಓದಿ ನೋಡಬೇಕು ಅನ್ನೋ ಹಂಬಲವನ್ನೂ ಪಕ್ಕದಲ್ಲಿ ಕೂಡಿಸಿಕೊಂಡು ಪುಟ ತೆರೆದೇ ಬಿಟ್ಟೆ.

ಸಂಪಾದಕೀಯದಲ್ಲೇ ಸೃಜನಶೀಲ ಸಾಹಿತ್ಯಕ್ಕೆ ಅನುಭವ-ಚಿಂತನೆಗಳೆರಡರ ಅಗತ್ಯದ ಕುರಿತು ಹೇಳುತ್ತಾ, ವೈಚಾರಿಕತೆಯ ಹೆಸರಿನ ಗೊಡ್ಡು ಅಕೆಡೆಮಿಕ್ ಭಯೋತ್ಪಾದನೆಯನ್ನೂ, ವೈಚಾರಿಕತೆಯನ್ನು ಸಾರಾಸಗಟಾಗಿ ನಿರ್ಜೀವ ಪಾಂಡಿತ್ಯ ಅಂತ ಪಕ್ಕಕ್ಕೆ ತಳ್ಳೋ ಸೋಮಾರಿತನವನ್ನೂ ಒಂದೇ ಸಲ ನಿವಾಳಿಸಿಹಾಕಿದ ವಿವೇಕರ ನಿರ್ದಾಕ್ಷಿಣ್ಯ ಮಾತುಗಳು ಭಾವ-ಬುದ್ಧಿಗಳ ಬ್ಯಾಲನ್ಸ್ ಏನಿರಬೇಕನ್ನೋ ಹುಡುಕಾಟಕ್ಕೆ food for thought ಆಗಿ ಸಂದವು.
ಪುಟಗಳು ತಿರುವಿಹಾಕ್ತಿದ್ದ ಹಾಗೇ ಅಲ್ಲಲ್ಲಿ ಓದಿದ್ದ - ಕೇಳಿದ್ದ ಹೆಸರುಗಳು ಕಂಡು, ಅಬ್ಬಾ! ನೆಲೆ ಕಂಡೆ ಅನ್ನೋ ಸಮಾಧಾನ ಗಟ್ಟಿಯಾಗ್ತಾ ಹೋಯ್ತು. ಕಸ್ತೂರಿಯ ಪುಸ್ತಕವಿಭಾಗದಲ್ಲಿ ಬರುತ್ತಿದ್ದ ಅನುವಾದಗಳನ್ನ ಓದ್ತಿದ್ದಾಗ ಅನುವಾದಿತ ಸಾಹಿತ್ಯದಲ್ಲಿ ಎರಡು ಭಾಷೆ-ಸಂಸ್ಕೃತಿಗಳ negotiationನಲ್ಲಿ ಹುಟ್ಟುವ ವಿಚಿತ್ರ-ವಿಶಿಷ್ಟ ಸೊಗಡಿನಲ್ಲಿ ಕಳೆದುಹೋಗುತ್ತಿದ್ದೆ. ಆ ಅನುಭವವನ್ನ ವಿವೇಕ್ ಹಾಗೂ ಜಯಂತ್ ಕಾಯ್ಕಿಣಿಯವರು ಅನುವಾದಿಸಿರೋ ಐಸಾಕ್ ಬಾಶೆವಿಸ್ ಸಿಂಗರ್‍ನ ಕಥೆ ’ಮಳ್ಳ ಗಿಂಪೆಲ್’ ಮತ್ತೆ ನೆನಪಿಸಿತು.

ನಾನ್ಯಾಕೆ ಕಥೆ ಬರೆದಿಲ್ಲ ಅನ್ನೋದು ಈ ಸಲದ ಸಮಯಪರೀಕ್ಷೆಯಲ್ಲಿ ಕಥೆಗಾರರ ಬರಹಗಳನ್ನ ಹಾಗೂ ನಾನು ಇತ್ತೀಚೆಗೆ ಓದಿ ಮುಗಿಸಿದ ಇಂಗ್ಲಿಷ್ ಕಾದಂಬರಿ - ಲುನಾಟಿಕ್ ಇನ್ ಮೈ ಹೆಡ್ - ಓದುತ್ತಿದ್ದಂತೆ ಒಂದಿಷ್ಟು ಸ್ಪಷ್ಟವಾಗೋಕೆ ಷುರುವಾಯ್ತು. ಎಷ್ಟೋಸಲ ಅಂತರ್ಜಾಲದಲ್ಲಿ ಅಂತರಪಿಶಾಚಿಯಾಗಿ ಅಲೀತಿರುವಾಗ ದೊಡ್ಡ ಹೆಸರುಗಳ / ಅವರಂತೆ ಬರಿಯಹೋಗುವ ಮರಿಬರಹಗಾರರ ಕಥೆಗಳನ್ನೋದಿ ಕೊನೆಗೆ ಏನೂ ಅರ್ಥವಾಗದೇ ತಬ್ಬಿಬ್ಬಾಗಿ ನನ್ನ ಸಾಹಿತ್ಯಾಭ್ಯಾಸ ಕನ್ನಡಕ್ಕೆ ಸಲ್ಲದ್ದೋ, ಅಥವಾ ಕಲಿತದ್ದು ನಾನೇ ಮರೆತಿದ್ದೀನೋ, ಅಥವಾ ೨-೩ ವರ್ಷದಲ್ಲೇ ಔಟ್‍ಡೇಟೆಡ್ ಆಗಿಬಿಟ್ಟೆನೋ ಅನ್ನಿಸೋ ದಿಗ್ಭ್ರಾಂತಿಯ ಕ್ಷಣಗಳಿಗೆ ಇಲ್ಲಿ ವಸುಧೇಂದ್ರರ ಮಾತುಗಳು ಸಮಾಧಾನ ಹೇಳಿದವು! ಮಹಿಳಾ ಸಾಹಿತ್ಯದ ಬಗೆಗೆ ಸುಕನ್ಯಾ ಕನಾರಳ್ಳಿಯವರ ಸಾಲುಗಳನ್ನೋದುತ್ತಿದ್ದಾಗ ಫಣಿಯಮ್ಮನೊಂದಿಗಿನ ಎಂ ಫಿಲ್ ಯಾತ್ರೆಯ de javu ಭಾವನೆ....some shared grounds... ಡಯಸ್ಪೋರಾ ಕನ್ನಡಿಗರನ್ನ ಕಾಡೊ ಐಡೆಂಟಿಟಿ ಪಾಲಿಟಿಕ್ಸ್ ಬೆಂಗ್ಳೂರ್ ಕನ್ನಡಿಗರನ್ನೇನ್ ಬಿಟ್ಟಿಲ್ಲ ಅನ್ನಿಸಿಬಿಟ್ಟಾಗ ಆ shared grounds ಭಾವನೆಗೆ ಒಂದು ವಿಷಾದದ ನಂಟು...
ತೆರೆಮರೆಗಳಿಲ್ಲದೇ ಅತ್ಯಂತ ಪ್ರಾಮಾಣಿಕವಾಗಿ, ಸರಳವಾಗಿ ತನ್ನ ಕಥನ ಸತ್ಸಂಗದ ಸಾಂಗತ್ಯ ಅಂದುಬಿಡೋ ಸುನಂದಾ ಪ್ರಕಾಶ ಕಡಮೆ, ಆಲ್ಟರ್ ಈಗೋದ ಜೊತೆಯ ಸಂಭಾಷಣೆಯಾಗಿ ತಮ್ಮ ಕಥನದ ಕಥೆ ಬಿಚ್ಚಿಟ್ಟು ಪ್ರಶ್ನೆಗಳೆಬ್ಬಿಸೋ ಗುರುಪ್ರಸಾದ್ ಕಾಗಿನೆಲೆ...

ಹಲವು ಪ್ರಶ್ನೆಗಳಿಗೆ ಉತ್ತರಗಳು, ಇನ್ನೊಂದಷ್ಟು ಹೊಸ ಪ್ರಶ್ನೆಗಳು, ನನ್ನೊಳಗಿನ ಬರಹದ ತುಡಿತಕ್ಕೆ, ಬರೆಯಲಾರೆ ಅನ್ನಿಸೋ ಕ್ಷಣಗಳಿಗೆ... familiar ಅನ್ನಿಸುತ್ತಲೇ ಹೊಸ ವಿಚಾರಗಳನ್ನ ತೆರೆದಿಡುತ್ತ ಅತೀ ವೇಗದಲ್ಲಿ ಆತ್ಮೀಯರಾಗಿಬಿಡೋ ಜನರೊಂದಿಗಿನ ಸಹಚರ್ಯದಂತೆ ’ದೇಶಕಾಲ’ದ ಸಾಂಗತ್ಯ ಅನಿಸಿಬಿಡ್ತು. ಒಂದೊಂದು ಸಾಲೂ ಚಪ್ಪರಿಸಿ ಸವಿದಿದ್ದೀನಿ. ಒಂದೆರಡು ಬರಹಗಳನ್ನ ಹಬ್ಬದ ಹೋಳಿಗೆಯಂತೆ ನಾಳೆಗೆ ಉಳಿಸಿಕೊಂಡಿದ್ದೀನಿ, ಏಪ್ರಿಲ್ ಹದಿನೈದರ ವರೆಗೆ ಮುಂದಿನ ಸಂಚಿಕೆಗೆ ಕಾಯ್‍ಬೇಕಲ್ಲ!

ಅಂದಹಾಗೆ ಸಬ್‍ಸ್ಕ್ರಿಪ್ಶನ್ ಕಳಿಸೋವಾಗ ಹಿಂದಿನ ಸಂಚಿಕೆಗಳು ಸಿಗುತ್ವಾ ಅಂತ ಕೇಳಿದ ಒಂದು ಸಾಲಿಗೆ ಯಾವ್ ಯಾವ್ ಸಂಚಿಕೆಗಳು ಲಭ್ಯ ಅಂತ ದೇಶಕಾಲ ಟೀಮ್‍ನ ಎಸ್ಸೆಮ್ಮೆಸ್ಸೂ ಬಂತು ಅನ್ನೋದು ಈಗ ಅಷ್ಟೊಂದು ಆಶ್ಚರ್ಯದ ವಿಷ್ಯ ಅನ್ನಿಸಲ್ಲ್ವೇನೋ!

ಹಾಂ, ಮತ್ತೆ ಹೊದಿಕೆಯ ವಿನ್ಯಾಸದಲ್ಲಿನ ಕಥೆಗಾರರ ಹೆಸರಿನ ಯಾದಿಯಲ್ಲಿ ನಮ್ಮ ಬ್ಲಾಗಿಗರ ಹೆಸರುಗಳು ಅಲ್ಲಲ್ಲಿ ಮಿನುಗಿದ್ದೂ ವಾವ್ ಅನ್ನಿಸಿದ್ ವಿಷ್ಯ!

Friday, February 01, 2008

ಕಳೆಯದ ನಿನ್ನೆ
ಕೈಜಾರಿದ ನಾಳೆಗಳ ನಡುವೆ
ನಿಟ್ಟುಸಿರೊಂದಕ್ಕೆ
ನಿದ್ದೆಗೊಮ್ಮೆ ನಿತ್ಯಮರಣ
ಎದ್ದ ಸಲ ನವೀನ ಜನನ!

(ಕನ್ನಡ ಬ್ಲಾಗ್ ಲೋಕದ ಲೇಟೆಸ್ಟ್ ಸಾಂಕ್ರಾಮಿಕ - ಚುಟುಕರೋಗ, ಇದನ್ನು ಕವಿತೆಯಾಗಿ ಬೆಳೆಸದ ನನ್ನ ಸೋಮಾರಿತನಕ್ಕೆ ಎಕ್ಸ್‌ಕ್ಯೂಸ್!)